ಸಿದ್ದಾಪುರ: ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲೆಯ ಸಂಬಂಧೀ ಚಟುವಟಿಕೆಗಳು ಸಮಾಜವನ್ನು ಮುಂದೆ ತೆಗೆದುಕೊಂಡು ಹೋಗುವ ಹಾದಿಗಳಾಗಿವೆ. ಸಂಘಟಿತ ಸಮಾಜ ಮಾತ್ರ ಸದೃಢವಾಗಿ ನಿಲ್ಲಬಲ್ಲದು. ನಾಗಚೌಡೇಶ್ವರಿ ದೇವಸ್ಥಾನವು ಶ್ರದ್ದಾ ಕೇಂದ್ರವಾಗಿ ರೂಪಗೊಂಡಿದೆ. ಇದರ ವಾರ್ಷಿಕೋತ್ಸವದ ಕಾರಣಕ್ಕೆ ಅನ್ನ ಸಂತರ್ಪಣೆ ಮತ್ತು ಯಕ್ಷಗಾನಗಳನ್ನು ಏರ್ಪಡಿಸುವುದರ ಮೂಲಕ ಈ ಸಮಾಜದ ಮನೋಭಾವವು ಉಳಿದವರಿಗೂ ದಾರಿದೀಪವಾಗಿದೆ ಎಂದು ಗ್ರಾಮಪಂಚಾಯತನ ಮಾಜಿ ಅಧ್ಯಕ್ಷರಾದ ಆದರ್ಶ ಪೈ ಬಿಳಗಿಯವರು ಹೇಳಿದರು.
ಶುಕ್ರವಾರದಂದು ಸಿದ್ಧಾಪುರ ತಾಲೂಕಿನ ಹೊನ್ನೆಘಟಗಿಯಲ್ಲಿ ನಾಗಚೌಡೇಶ್ವರಿ ವಾರ್ಷಿಕ ಸಮಾರಾಧನೆಯ ನಿಮಿತ್ತ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಿದ್ದರು. ಸಾಂಸ್ಕೃತಿಕ ಪರಿಸರವನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಹೊಣೆ ನಮಗಿದೆ. ಆ ನಿಟ್ಟಿನಲ್ಲಿ ನಾಗಚೌಡೇಶ್ವರಿ ಕಲಾಸಂಘದವರ ನಡವಳಿಕೆ ಅತ್ಯಂತ ಶ್ಲಾಘನೀಯವಾದುದು. ಸದಾ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಹಾರೈಸಿದರು. ಕಲಾ ಸಂಘದವರು ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷ ನಂದನ ಬೋರ್ಕರ್, ಸಾಮಾಜಿಕ ಮುಖಂಡ ರಮಾನಂದ ರಾಮ ನಾಯ್ಕ ಹರಗಿ ಹಾಗೂ ಆದರ್ಶ ಪೈ ಇವರುಗಳನ್ನು ಶಾಲು ಹಾರ, ಸ್ಮರಣಿಕೆಗಳನ್ನಿತ್ತು ಸನ್ಮಾನಿಸಲಾಯಿತು. ಸ್ಥಳದಾನಿಗಳಾದ ಜಿ.ಆರ್.ಭಟ್ಟ ಭಟ್ರಕೇರಿ, ಸಾಮಾಜಿಕ ಕಾರ್ಯಕರ್ತ ಕಿರಣ ಕಾನಡೆ, ನಾಗಚೌಡೇಶ್ವರಿ ಸಂಘದ ಅಧ್ಯಕ್ಷ ಮಂಜುನಾಥ ಚೆನ್ನಯ ಹೆಚ್ಚೆ ಸದಸ್ಯ ರಮೇಶ ದ್ಯಾವ ಚೆನ್ನಯ ಹೊನ್ನೆಘಟಗಿ, ರಮೇಶ ನಾರಾಯಣ ಚೆನ್ನಯ ಹೊನ್ನೇಘಟಗಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ರವಿ ಚೆನ್ನಯ ಹಾಗೀ ಪ್ರಶಾಂತ ನಾಯ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು.
ನಂತರ ಕಲಾಭಾಸ್ಕರ (ರಿ.) ಇಟಗಿ ಇವರಿಂದ ಅಜ್ಞಾತ ಕವಿ ವಿರಚಿತ ರಾಜಾ ರುದ್ರಕೋಪ ಎಂಬ ಪೌರಾಣಿಕ ಯಕ್ಷಗಾನ ನಡೆಯಿತು. ಚಂದ್ರಸೇನನಾಗಿ ಅಶೋಕ ಭಟ್ಟ ಸಿದ್ದಾಪುರ, ಜಯಸೇನನಾಗಿ ಜನಾರ್ದನ ಹಾರ್ಸಿಕಟ್ಟೆ, ರಕ್ತಜಂಘನಾಗಿ ಶ್ರೀಕಾಂತ ಭಟ್ಟ ಹೆಗ್ಗೋಡು ನರದನಾಗಿ ಇಟಗಿ ಮಹಾಬಲೇಶ್ವರ, ಸತ್ಯಶೀಲೆಯಾಗಿ ವಿಘ್ನೇಶ ಬಾಸೊಳ್ಳಿ, ರಕ್ತಕೇಶಿಯಾಗಿ ವೆಂಕಟೇಶ ಹೆಗಡೆ ಬೊಗರಿಮಕ್ಕಿ, ರುದ್ರಕೋಪನಾಗಿ ಮಂಜುನಾಥ ಶೆಟ್ಟಿ ಕಾಳೆನಳ್ಳಿ, ಚಿತ್ರಾಕ್ಷಿಯಾಗಿ ಸದಾನಂದ ಪಟಗಾರ ಶಿರ್ಸಿ, ಮುದುಕಿಯಾಗಿ ಶ್ರೀಧರ ಹೆಗಡೆ ಚಪ್ಪರಮನೆ, ದೂತನಾಗಿ ರಮಚಂದ್ರ ಹೆಗಡೆ ಚಪ್ಪರಮನೆ ಮುಂತಾದವರು ಭಾವಪೂರ್ಣ ಪಾತ್ರಾಭಿನಯಗಳಿಂದ ಸೊಗಸಾದ ಪ್ರದರ್ಶನವನ್ನು ನೀಡಿದರು. ಕುಮಾರಿ ಮಾನ್ವಿ ಪ್ರಶಾಂತ ನಾಯ್ಕ ಹಾಗೂ ಸಂಗಡಿಗರಿಂದ ಬಾಲಗೋಪಾಲ ನೃತ್ಯ ಪದರ್ಶಿತವಾಯಿತು. ದಿನೇಶ ಭಟ್ಟ ಯಲ್ಲಾಪುರ ಅವರ ಭಾಗವತಿಕೆ, ಸಂಪ ಲಕ್ಷ್ಮಿನಾರಾಯಣ ಅವರ ಚಂಡೆವಾದನ ಹಾಗೂ ಜಿ.ಎಸ್.ಮಂಜುಣಾಥ ರಾವ್ ಗುಡ್ಡೆದಿಂಬ ಅವರ ಮದ್ದಳೆವಾದನಗಳು ಸುಂದರವಾದ ಹಿಮ್ಮೇಳವನ್ನು ಒದಗಿಸಿದವು. ಎಮ್.ಆರ್.ನಯ್ಕ ಕರ್ಸೆಬೈಲು ಅವರು ತಮ್ಮ ಲಕ್ಷ್ಮಿನಾರಾಯಣ ಯಕ್ಷಗಾನ ಮಂಡಳಿಯ ಮೂಲಕವಾಗಿ ಧ್ವನಿ, ಬೆಳಕು, ರಂಗಸಜ್ಜಿಕೆ ಹಾಗೂ ವೇಷಭೂಷಣಗಳನ್ನು ವ್ಯವಸ್ಥೆಗೊಳಿಸುವುದರ ಮೂಲಕ ನೆರವಾದರು. ಅತ್ಯಂತ ಸುಂದರವಾದ ರಂಗಕೃತಿಯ ಯಕ್ಷಗಾನ ಪ್ರದರ್ಶನವು ಇದಾಯಿತು.